Product details
ಹಿರಿಯ ಮಿತ್ರ ಸು. ನಾಗರಾಜರವರು ‘ವಿಕ್ರಮ’ ವಾರಪತ್ರಿಕೆಯ ಮೂಲಕ ಪ್ರತಿವಾರ ನಾಡಿನಾದ್ಯಂತ ಓದುಗರಿಗೆ ‘ಕಷಾಯ’ ಕುಡಿಸುತ್ತ ಆರೋಗ್ಯಕರ ಸಮಾಜ ನಿರ್ಮಾಣದ ಸದಾಶಯವನ್ನು ಹೊಂದಿರುವವರು. ನಿತ್ಯ ಜೀವನದಲ್ಲಿ ಗಮನಕ್ಕೆ ಬಂದ ಅನೇಕ ಸಂಗತಿಗಳನ್ನು ತಮ್ಮದೇ ಶೈಲಿಯಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಂಬಂಧಿತವಾಗಿ ವ್ಯಾಖ್ಯಾನಿಸಿ, ಲೇಖಬದ್ಧಗೊಳಿಸಿ ಉಳಿದವರಿಗೂ ಲಾಭವಾಗುವಂತೆ ಮಾಡಿದ್ದಾರೆ.
ಬಾಲ್ಯದಿಂದಲೂ ಸ್ವಯಂಸೇವಕರಾಗಿ ಸ್ಪಷ್ಟವಾದ ರಾಷ್ಟ್ರೀಯ ಚಿಂತನೆಯುಳ್ಳ ಇವರು, ಮನೆಯಲ್ಲಿ ದೊರೆತ ಸಂಸ್ಕಾರದಿಂದ ಬೆಳೆದ ದೃಷ್ಟಿ ವೈಶಾಲ್ಯತೆ ಹಾಗೂ ಕೆನರಾ ಬ್ಯಾಂಕ್ ಉದ್ಯೋಗ ನಿಮಿತ್ತ ವಿವಿಧ ಊರುಗಳಲ್ಲಿ ಕಾರ್ಯನಿರ್ವಹಿಸುವಾಗ ಹಲವು ಬಗೆಯ ವ್ಯಕ್ತಿಗಳ ಒಡನಾಟದಲ್ಲಿ ಪಡೆದ ಅನುಭವಗಳನ್ನು ವಿಶ್ಲೇಷಿಸಿ ಲೇಖಬದ್ಧಗೊಳಿಸಿರುವುದು ಈ ಪುಸ್ತಕದ ಓದುಗರಿಗೆ ಅನುಭವಕ್ಕೆ ಬರುವುದು ನಿಶ್ಚಿತ.
ಸಂಘ ಶತಾಬ್ದಿಯ ಸುಸಂದರ್ಭದಲ್ಲಿ ಪಂಚಪರಿವರ್ತನೆಯ ಚಿಂತನೆಯ ಮೂಲಕ ಸುಂದರ ಭಾರತ ನಿರ್ಮಿಸುವ ಸದಾಶಯಕ್ಕೆ ಸಾಹಿತ್ಯ ಸೇವೆಯ ಉದ್ದೇಶವುಳ್ಳ ಈ ಪುಸ್ತಕದ ಪ್ರತಿಯೊಂದು ಲೇಖನವೂ ಪೂರಕವಾಗಿದೆ. ‘ನಾಗರಿಕ ಪ್ರಜ್ಞೆ’ ಅತ್ಯವಶ್ಯಕ ಕರ್ತವ್ಯ ಎಂದು ಎಚ್ಚರಿಸಿದಲ್ಲಿ, ದುರಂತಕ್ಕೀಡಾದ ಕುಟುಂಬಕ್ಕೆ ‘ಬ್ಯಾಂಕಿನ ಸವಲತ್ತುಗಳು ಸದುಪಯೋಗವಾದಾಗ’ ಆಗುವ ಪರಿಣಾಮಗಳನ್ನು ವಿವರಿಸುತ್ತದೆ. ಲಿಂಗಜ್ಜನ ಸಹಜವಾದ, ಆದರೆ ಈ ದೇಶದ ಪರಹಿತ ಚಿಂತನೆಯ ಪ್ರತ್ಯಕ್ಷ ಉದಾಹರಣೆಯಾದ ‘ಹಿತಮಿತ ಮಾತೆಂದರೆ ಹೀಗಲ್ಲವೇ?’ ಲೇಖನ ಮನಮುಟ್ಟುವ ರೀತಿಯಲ್ಲಿ ಚಿತ್ರಿತವಾಗಿದೆ.
ಪುರಾಣ ಕಾಲದಿಂದ ಆರಂಭಿಸಿ ಚಾರಿತ್ರಿಕ ಹಾಗೂ ಸಮಕಾಲೀನ ವ್ಯಕ್ತಿಗಳು-ಘಟನೆಗಳನ್ನು ಆಧರಿಸಿ ಪುಟ್ಟ ಪುಟ್ಟ ಲೇಖನಗಳ ಮೂಲಕ ದೇಶಕಟ್ಟುವ ಕಾರ್ಯದಲ್ಲಿ ತೊಡಗಿರುವ ಸು. ನಾಗರಾಜರಂತಹ ಲೇಖಕ-ಸಾಹಿತಿಗಳ ಸಂತತಿ ಸಾವಿರವಾಗಲಿ ಎಂಬುದೇ ಈ ಬೆನ್ನುಡಿಯ ಸದಿಚ್ಛೆ.
-ನ.ನಾಗರಾಜ
ಗೌರವ ಸಂಪಾದಕ
‘ವಿಕ್ರಮ’ ವಾರಪತ್ರಿಕೆ
Similar products